ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಆಗುವ ಕಥೆ ಏನಾಯಿತು..?

ತಾರೀಕ್ ಪೆ ತಾರೀಕ್, ತಾರೀಕ್ ಪೆ ತಾರೀಕ್, ಮಿಲ್ ರಹಿ ಹೈ ಲೇಕಿನ್, ಇನ್ಸಾಫ್ ನಹಿ ಮಿಲಾ…
1993 ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ‌ ದಾಮಿನಿಯಲ್ಲಿ ನಟ ಸನ್ನಿ ಡಿಯೋಲ್ ಕೋರ್ಟ್ ಸನ್ನಿವೇಶದಲ್ಲಿ ಹೇಳುವ ಡೈಲಾಗ್‌ನಂತೆ ಆಗಿದೆ ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕಥೆ.
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ಬೆಂಬಲಿಗ
ರಾಮನಗರ ಶಾಸಕ ಇಕ್ಬಾಲ್ ಹುಸೇನ್  ಹೇಳುತ್ತಲೇ ಇದ್ದಾರೆ. ಇಕ್ಬಾಲ್ ಹುಸೇನ್ ಒಂದು ರೀತಿಯಲ್ಲಿ ಡಿ ಕೆ ಶಿವಕುಮಾರ್ ಅವರ ಭವಿಷ್ಯಕಾರರಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸುವ ಮುನ್ನ ಈ ಕುರಿತು ಭವಿಷ್ಯ ಹೇಳಲು ಶುರುವಿಟ್ಟುಕೊಂಡಿದ್ದ ಇಕ್ಬಾಲ್ ಹುಸೇನ್
ಆ ಬಳಿಕ ಜನವರಿ 6 ರಂದು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದರು.
6 ಹಾಗೂ 9 ಡಿ ಕೆ ಶಿವಕುಮಾರ್ ಅವರ ಅದೃಷ್ಟ ಸಂಖ್ಯೆ ಎಂದು ಕೂಡ ಇಕ್ಬಾಲ್ ಹುಸೇನ್ ಹೇಳಿದ್ದರು.
ಆದರೆ, ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯವಾಣಿ ಹುಸಿಯಾಗಿತ್ತು. ಮೇ 15 ಜನ್ಮದಿನದಂದು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಶಾಸಕ ಇಕ್ಬಾಲ್ ಹುಸೇನ್ ಮತ್ತೊಂದು ದಿನಾಂಕ ನಿಗದಿಪಡಿಸಿದ್ದರು. ಆದರೆ
ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯವಾಣಿ ಮತ್ತೊಮ್ಮೆ ಹುಸಿಯಾಗಿದೆ. ಎರಡೂವರೆ ವರ್ಷ ಅಧಿಕಾರದ ಒಪ್ಪಂದವಾಗಿತ್ತು ಎಂದು ಡಿ ಕೆ ಶಿವಕುಮಾರ್ ಪರೋಕ್ಷವಾಗಿ ಎಷ್ಟೇ ಸಲ ಹೇಳಿದರೂ ಇದೀಗ ಸಿದ್ದರಾಮಯ್ಯ ಸರ್ಕಾರ ಮೂರು ವರ್ಷದ ಅಧಿಕಾರ ಪೂರೈಸಿದೆ.
ಮೇಲಾಗಿ ಡಿ ಕೆ ಶಿವಕುಮಾರ್ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿತಂತ್ರ ಹೆಣೆಯುತ್ತಲೇ ಇದ್ದಾರೆ. ಅಧಿಕಾರ ಬಿಟ್ಟುಕೊಡಲೇಬೇಕಾದ ಸಂದರ್ಭ ಬಂದರೆ ಡಿ ಕೆ ಶಿವಕುಮಾರ್ ಬದಲಿಗೆ ಬೇರೊಬ್ಬರು ಅಂದರೆ ತಾವು ಹೇಳಿದವರು ಮುಖ್ಯಮಂತ್ರಿ ಆಗಲಿ ಎಂಬುದು ಸಿದ್ದರಾಮಯ್ಯ ಪಟ್ಟು ಆಗಿದೆ.
ಅಧಿಕಾರ ಸಿಗದಿದ್ದರೆ ಡಿ ಕೆ ಶಿವಕುಮಾರ್ ಸುಮ್ಮನೆ ಇರಬಹುದೇನೋ.? ಆದರೆ ಸಿಎಂ ಸಿದ್ದರಾಮಯ್ಯ ಸುಮ್ಮನಿರುವವರಲ್ಲ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಆಡಿದ ಆಟ ನೆನಪಿಸಿಕೊಂಡರೆ ಸಾಕು ತಿಳಿಯುತ್ತದೆ ರಾಜಕೀಯ ಎತ್ತ ಸಾಗಲಿದೆ ಎಂದು.

ಗೃಹಮಂತ್ರಿ ಜಿ.ಪರಮೇಶ್ವರಗೆ ಲಾಲಿಪಾಪ್ ತೋರಿಸುತ್ತಿದ್ದಾರಾ ಸಿಎಂ ಸಿದ್ದರಾಮಯ್ಯ ?

ಜಿ ಪರಮೇಶ್ವರಗೆ ಸಿದ್ದು ಲಾಲಿಪಾಪ್

ರಾಜ್ಯದ ಗೃಹಮಂತ್ರಿ ಜಿ ಪರಮೇಶ್ವರ ಅವರಲ್ಲಿ ಮುಖ್ಯಮಂತ್ರಿ ಆಗುವ ಆಸೆ ಗರಿಗೆದುರಿದೆ.
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಿರುವ ನಡುವೆ ಪರಮೇಶ್ವರ ಸಿಎಂ ಕುರ್ಚಿ ಮೇಲೆ ಆಸೆಗಣ್ಣು ನೆಟ್ಟಿದ್ದಾರೆ. ಅದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ.
ಒಂದು ವೇಳೆ ಮುಖ್ಯಮಂತ್ರಿ ಬದಲಿಸುವುದಾದರೆ ಡಿಕೆಶಿ ಬದಲಿಗೆ ಬೇರೆಯವರನ್ನು ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿಯಬಹುದು.
ಆಗ ತಮ್ಮ ಹೆಸರು ಮುಂಚೂಣಿಗೆ ಬರಬಹುದು ಎಂದು ಪರಮೇಶ್ವರ ನಂಬಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪರಮೇಶ್ವರ ಅವರಿಗೆ ಭರವಸೆ ನೀಡಿರಬಹುದು.
ಆ‌ ಕಾರಣಕ್ಕೆ‌ ಪರಮೇಶ್ವರ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿತ್ತು.
ಆಗಲೇ ಅವರು ಮುಖ್ಯಮಂತ್ರಿ ಆಗಬೇಕಿತ್ತು.
ಆದರೆ, ಪರಮೇಶ್ವರ ಚುನಾವಣೆಯಲ್ಲಿ ಸೋತಿದ್ದರಿಂದ ಮುಖ್ಯಮಂತ್ರಿ ರೇಸಿನಿಂದ ಹಿಂದೆ ಸರಿಯುವಂತಾಗಿತ್ತು. ಇದರಿಂದಾಗಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಎದುರಾಳಿಗಳಿಲ್ಲದೆ ಮುಖ್ಯಮಂತ್ರಿ ಆಗಿದ್ದರು.
ಕೊರಟಗೆರೆ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಜಿ. ಪರಮೇಶ್ವರ ಸೋಲಿನಲ್ಲಿ ಸಿದ್ದರಾಮಯ್ಯ ಕೈವಾಡ ಇತ್ತೆಂಬ ಮಾತುಗಳು ಕೇಳಿಬಂದಿದ್ದವು.
ಯಾಕೆಂದರೆ ರಾಜಕೀಯವಾಗಿ ಅಷ್ಟೇನೂ ಪ್ರಭಾವಿಯಲ್ಲದ ಜೆಡಿಎಸ್ ಅಭ್ಯರ್ಥಿ ಸುಧಾಕರಲಾಲ್ ವಿರುದ್ಧ ಪರಮೇಶ್ವರ ಸೋತಿದ್ದರು. ಆ ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಡಿಸಿಎಂ ಆಗಲು ಪರಮೇಶ್ವರ ಹರಸಾಹಸ ಪಡಬೇಕಾಯಿತು. ಗೃಹ ಖಾತೆ ಸಿಕ್ಕರೂ ಅದನ್ನು ಪರಮೇಶ್ವರ ಬದಲಿಗೆ ಆಗ ಗೃಹ ಸಚಿವರ ಆಪ್ತ ಸಲಹೆಗಾರರಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಸಿಎಂ‌ ಸಿದ್ದರಾಮಯ್ಯ ಪರಮಾಪ್ತ ಕೆಂಪಯ್ಯ ನಿಭಾಯಿಸುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಸಿದ್ದರಾಮಯ್ಯ ಅವರಿಂದಾಗಿ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದರೂ ಇದೀಗ ಅದೇ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ ಪರಮೇಶ್ವರ.
ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಹಾಗೂ ಶತ್ರುಗಳಲ್ಲ ಎಂಬ ಮಾತಿನಂತೆ ಪರಮೇಶ್ವರ ನಡೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ರಾಜಕೀಯದಲ್ಲಿ ಅಧಿಕಾರವೇ ಮುಖ್ಯವಾಗುತ್ತದೆ.
ಒಂದು ವೇಳೆ ಮುಖ್ಯಮಂತ್ರಿ ಬದಲಿಸುವುದಾದರೆ ಸಿದ್ದರಾಮಯ್ಯ ಬಲಗೈ ಬಂಟನಂತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗಿಂತ ಪರಮೇಶ್ವರ ಹೆಸರು ಮುಂಚೂಣಿಗೆ ಬರುವ ಸಾಧ್ಯತೆ ಇದೆ.
ಜಾರಕಿಹೊಳಿ ಕೂಡ ಈಗ ನಾನು ಮುಖ್ಯಮಂತ್ರಿ ರೇಸಿನಲ್ಲಿಲ್ಲ. 2028 ರ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಮಂತ್ರಿ ಪರಮೇಶ್ವರ ಅವರ ಹೆಸರು ಮುಂದಿಟ್ಟುಕೊಂಡು ಡಿಸಿಎಂ ಡಿ ಕೆ ಶಿವಕುಮಾರ ಅವರಿಗೆ ಚೆಕ್ ನೀಡುತ್ತಿದ್ದಾರೆ.
ಪರಮೇಶ್ವರ ಮುಖ್ಯಮಂತ್ರಿಯಾದರೆ ದಲಿತರೊಬ್ಬರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಸಿಕ್ಕಂತಾಗುತ್ತದೆ‌. ಅದರ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಿಕ್ಕಂತಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಡಿ ಕೆ ಶಿವಕುಮಾರ ಅವರಿಗೆ ಕಾಂಗ್ರೆಸ್ ನಲ್ಲಿ ಪರ್ಯಾಯ ಎಂಬುದು ಏನಾದರೂ ಇದ್ದರೆ ಅದು ಜಿ ಪರಮೇಶ್ವರ ಮಾತ್ರ.
ಇದರಿಂದಾಗಿ, ಪರಮೇಶ್ವರ ಹೆಸರು ಮುನ್ನೆಲೆಗೆ ತರುತ್ತಾ‌ ಸಿದ್ದರಾಮಯ್ಯ ಅಧಿಕಾರಾವಧಿ ಪೂರೈಸುವ ಎಲ್ಲ ಸಾಧ್ಯತೆಗಳಿವೆ‌.

ಟಿಎಂಸಿಯ ಎಕ್ಕ ಈಗ ಪಶ್ಚಿಮ ಬಂಗಾಳ ಬಿಜೆಪಿಯ ರಾಜ

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ.‌ ಬಿಜೆಪಿ ಗೆಲುವಿನಲ್ಲಿ ಪಕ್ಷದ ರಣತಂತ್ರ,
ಟಿಎಂಸಿ ವಿರುದ್ಧ ಹೋರಾಟ, ಆರ್‌ ಎಸ್ ಎಸ್ ಸಂಘಟನೆ, ಹಿಂದುತ್ವ ಏನೇ ಕಾರಣಗಳಿರಬಹುದು
ಈಗ ಮುಖ್ಯಮಂತ್ರಿಯಾಗಿರುವ ಸುವೇಂದು ಅಧಿಕಾರಿ ಪಾತ್ರ ಕೂಡ ಅಷ್ಟೇ ಪ್ರಮುಖವಾಗಿದೆ.

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನಲ್ಲಿ ಪ್ರಮುಖ ಹಾಗೂ ಪ್ರಬಲ  ನಾಯಕರಾಗಿದ್ದ ಸುವೇಂದು ಅಧಿಕಾರಿ ಅವರನ್ನು ಬಿಜೆಪಿ 2020 ರಲ್ಲಿ ಪಕ್ಷಕ್ಕೆ ಸೆಳೆದು ಮಮತಾ ಬ್ಯಾನರ್ಜಿಗೆ ಚೆಕ್ ನೀಡಿತ್ತು. ಅದಕ್ಕೂ ಮುನ್ನ ಬಿಜೆಪಿ, ತೃಣಮೂಲ ಕಾಂಗ್ರೆಸ್ ನ ಅನೇಕ ನಾಯಕರನ್ನು ಪಕ್ಷಕ್ಕೆ ಸೆಳೆದಿದ್ದರೂ ಅವರು ಬಿಜೆಪಿ ನಿರೀಕ್ಷೆ ಸಾಬೀತುಪಡಿಸಿರಲಿಲ್ಲ. ಆದರೆ, ಸುವೇಂದು ಅಧಿಕಾರಿ ಪ್ರಾಬಲ್ಯ 2021 ರ ವಿಧಾನಸಭಾ ಚುನಾವಣೆಯಲ್ಲೇ ಸಾಬೀತಾಗಿತ್ತು.

ನಂದಿಗ್ರಾಮ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಬಿಜೆಪಿಯಲ್ಲಿ ಅಧಿಕಾರದ ಭರವಸೆ ಮೂಡಿಸಿದ್ದರು. ಇದೀಗ ಭವಾನಿಪುರದಲ್ಲೂ ಮಮತಾ‌ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಪ್ರಾಬಲ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.ಬಭವಾನಿಪುರದೊಂದಿಗೆ ಇಡೀ ಬಂಗಾಳದಲ್ಲಿ  ತೃಣಮೂಲ ಕಾಂಗ್ರೆಸ್ ಗೆ ಸುವೇಂದು ಅಧಿಕಾರಿ ಸೋಲಿನ ರುಚಿ ತೋರಿಸಿದ್ದಾರೆ.

ಇನ್ನು ಸುವೇಂದು ಅಧಿಕಾರಿ ಸಂಪುಟದಲ್ಲಿ ಮಂತ್ರಿಯಾಗಿರುವ ನಿಶಿತ್ ಪ್ರಾಮಾಣಿಕ್ ಕೂಡ ಟಿಎಂಸಿಯಲ್ಲಿದ್ದವರು. ಕೇಂದ್ರ ಸರ್ಕಾರದಲ್ಲಿ ಗೃಹ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿದ್ದ ಇವರು 2019 ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.