ನರೇಗಾ ಯೋಜನೆಗೆ ಬಿಜೆಪಿಯಿಂದ ಕೊಡಲಿ ಪೆಟ್ಟು

ಶಿವಮೊಗ್ಗ : ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ಹಾಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯೋಜನೆಯ ಸ್ವರೂಪ ಬದಲಿಸುವ ವೇಳೆ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಜೊತೆ ಚರ್ಚೆ ನಡೆಸಬೇಕಿತ್ತು ಎಂದರು.

ಸಂವಿಧಾನಬದ್ಧ ಹಕ್ಕನ್ನು ನರೇಗಾದಲ್ಲಿ ನೀಡಲಾಗಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನರೇಗಾ ಯೋಜನೆ ತೆಗೆದು ಜಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯತಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಇದೀಗ ದೆಹಲಿಯಲ್ಲಿ ನಿರ್ಣಯ ಮಾಡಲಾಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ‌

ಉದ್ಯೋಗ ಖಾತ್ರಿಯಲ್ಲಿ ಆರು ಕೋಟಿ ಕುಟುಂಬದ ಪರವಾಗಿ ರಾಷ್ಟ್ರ ವ್ಯಾಪಿ ಆಂದೋಲನ, ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದ್ದರೆ ತಪ್ಪಿಸುವುದಾಗಿ ಹೇಳಿದ್ದು ತುಂಬಾ ಸಂತೋಷ, ಆದರೆ ಹಣ ದುರುಪಯೋಗ ತಿಳಿದುಕೊಳ್ಳಲು 12 ವರ್ಷ ಬೇಕಾಯಿತೇ ಎಂದು ಪ್ರಶ್ನಿಸಿದ ಸಚಿವರು, ಬಿಜಿಪಿಗರಿಗೆ ನಾಚಿಕೆ ಆಗಬೇಕು ಎಂದರು‌.

ಇನ್ನು ಬೆಳಗಾವಿ ಗಡಿ ಭಾಗ ಚೋರ್ಲ ಘಾಟ್ ನಲ್ಲಿ 2000 ರೂ ನೋಟ್ ಕಂತೆಯ 400 ಕೋಟಿ ಸಿಕ್ಕಿದೆ ಎನ್ನಲಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಪೊಲೀಸರು ಚೆನ್ನಾಗಿ ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಹಣ ಯಾರದ್ದು ಎಂದು ತಿಳಿಯಬೇಕು, ಗುಜರಾತ್ ನಿಂದ ಬಂದಿದೆ ಎನ್ನಲಾಗುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲುಮುಟ್ಟಿ ಯಾಕೆ ನೋಡಿಕೊಳ್ಳುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ಅದಾನಿ, ಅಂಬಾನಿಗೆ ದೇಶ ಬರೆದುಕೊಟ್ಟಿದ್ದಾರೆ. ಅವರ 23,000 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕರ್ನಾಟಕದಲ್ಲಿ 40% ಭ್ರಷ್ಟಾಚಾರ ನಡೆಸಿದವರು, ಮುಖ್ಯಮಂತ್ರಿ ಜೈಲಿಗೆ ಹೋಗಿ ಬಂದಿದ್ದಾರೆ ಇವರಿಗೆ ನೈತಿಕತೆ ಇದೆಯಾ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಜೆಪಿ ವಿರುದ್ಧ ಕಿಡಿಕಾರಿದರು.

ಗೋವಾ ಸ್ವಾತಂತ್ರ್ಯ14 ವರ್ಷ ವಿಳಂಬ ಹಾಗೂ ಆಪರೇಷನ್ ವಿಜಯ್

ಭಾರತ 1947ರ ಆಗಸ್ಟ್ 15 ರಂದು ಬ್ರಿಟೀಷರ ದಾಸ್ಯದಿಂದ ಸ್ವತಂತ್ರಗೊಂಡಿತು. ಆದರೆ, ಹೈದರಾಬಾದ್, ಗುಜರಾತ್ ನ ಜುನಾಗಢ ಸಂಸ್ಥಾನ, ಗೋವಾ, ದಿಯು, ದಮನ್ ಪ್ರದೇಶದ ಜನರಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ನವಾಬರ ಅಧಿಕಾರ ದಾಹ, ಪಾಕಿಸ್ತಾನ ಪರ ವ್ಯಾಮೋಹದಿಂದ ಹೈದರಾಬಾದ್, ಜುನಾಗಢ ವಿಮೋಚನೆ ಸಾಧ್ಯವಾಗಿರಲಿಲ್ಲ.‌ ಇನ್ನು ಗೋವಾ ಸೇರಿದಂತೆ ಕೆಲವು ಪ್ರದೇಶಗಳು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿದ್ದವು.
ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ದಿಟ್ಟತನದಿಂದ ನಿಜಾಮನನ್ನು ಬಗ್ಗು ಬಡಿದು 1948ರ ಸೆ.17ರಂದು ಹೈದರಾಬಾದ್ ಸಂಸ್ಥಾನವನ್ನು ವಿಮೋಚನೆಗೊಳಿಸಿದ್ದರು. ಇದರಿಂದಾಗಿ ಕನ್ನಡದ ಪ್ರದೇಶಗಳಾದ ಬೀದರ್ ಹಾಗೂ ಅವಿಭಜಿತ ಗುಲ್ಬರ್ಗಾ, ರಾಯಚೂರು ಜಿಲ್ಲೆಗಳ ಜನರಿಗೂ ರಜಾಕರ ಕ್ರೌರ್ಯದಿಂದ ಮುಕ್ತಿ ಸಿಕ್ಕಿತ್ತು. ಅದೇ ರೀತಿ 1947ರ ಸೆಪ್ಟೆಂಬರ್‌ ನಲ್ಲಿ ಜುನಾಗಢ ನವಾಬನ ಆಡಳಿತದಿಂದ ವಿಮುಕ್ತಿಗೊಂಡರೂ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಸೇರಿದ್ದು 1949ರ ಜೂನ್ 25ರಂದು.‌
ದೇಶಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ಸಿಕ್ಕರೂ ಗೋವಾ, ದಿಯು, ದಮನ್ ಸೇರಿದಂತೆ ಕೆಲವು ಪ್ರದೇಶಗಳು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿದ್ದೇ ಕಗ್ಗಂಟಾಗಿತ್ತು. ಇದರಿಂದಾಗಿ ಈ ಪ್ರದೇಶದ ಜನರಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು.  ಗೋವಾದಲ್ಲಿ ಪೋರ್ಚುಗಲ್ ಆಡಳಿತ ಅಂತ್ಯಗೊಂಡಿದ್ದು 1961ರ ಡಿಸೆಂಬರ್ 19ರಂದು.‌ ಅದರ ಹಿಂದೆ ಒಂದು ರೋಚಕ ಕಥೆಯೇ ಅಡಗಿದೆ.
ಬ್ರಿಟಿಷರ ವಿರುದ್ಧದ ದೇಶದಲ್ಲಿ ಚಳವಳಿ ತೀವ್ರಗೊಂಡಿದ್ದಾಗ ಗೋವಾ ಜನರು ಅಲ್ಲಿನ ಪೋರ್ಚುಗೀಸರ ಆಡಳಿತದ ವಿರುದ್ಧ ತಿರುಗಿಬಿದ್ದಿದ್ದರು. 1947ರಲ್ಲಿ ಭಾರತ ಸ್ವತಂತ್ರಗೊಂಡರೂ ಗೋವಾ ವಿಷಯದಲ್ಲಿ ಅಂದಿನ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಲಿಲ್ಲ. ರಾಜತಾಂತ್ರಿಕ ಕಾರಣಗಳಿಂದಾಗಿ ಹೈದರಾಬಾದ್ ಮತ್ತು ಜುನಾಗಢದಂತೆಯೇ ಗೋವಾಕ್ಕೆ ಭಾರತೀಯ ಸೇನೆ ನುಗ್ಗಿಸುವುದು ಸುಲಭವಾಗಿರಲಿಲ್ಲ. ಅಮೆರಿಕಾ ಪೋರ್ಚುಗೀಸರ ಬೆಂಬಲಕ್ಕೆ ಇದ್ದಿದ್ದು ಮತ್ತಷ್ಟು ಕಗ್ಗಂಟಾಗಿತ್ತು. ಬ್ರಿಟೀಷರೇನೋ ಭಾರತಕ್ಕೆ ಸ್ವತಂತ್ರ ನೀಡಿ ಇಂಗ್ಲೆಂಡ್ ಗೆ ತೆರಳಿದರು. ಬ್ರಿಟೀಷರಂತೆ ಪೋರ್ಚುಗೀಸರು ಗೋವಾ, ದಿಯು, ದಮನ್ ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ಅಂತರರಾಷ್ಟ್ರೀಯ ಸಂಬಂಧಗಳ ನಿರ್ವಹಣೆಗೆ ಯುದ್ಧದ ಬದಲಿಗೆ ಮಾತುಕತೆ ಸೂಕ್ತ ಎಂಬುದು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಪ್ರತಿಪಾದನೆಯಾಗಿತ್ತು. ಆದರೆ, ದೇಶದ ಜನರು ಸುಮ್ಮನಿರಲಿಲ್ಲ. ದೇಶದ ವಿವಿಧ ಭಾಗಗಳ ಸಾವಿರಾರು ಜನರು ಗೋವಾಕ್ಕೆ ಹೋಗಿ ವಿಮೋಚನೆಯ ಆಂದೋಲನದಲ್ಲಿ ಭಾಗಿಯಾದರು. ಧರಣಿ ನಿರತರ ಮೇಲೆ ಪೋರ್ಚುಗಲ್ ಆಡಳಿತ ಗುಂಡಿನ ದಾಳಿ ನಡೆಸಿದ್ದರಿಂದ 32 ಜನರು ಮೃತಪಟ್ಟರು. ಇದರಿಂದಾಗಿ ಸೂಕ್ತ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿತು.
1962ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಬಾಂಬೆ ಪ್ರದೇಶದಲ್ಲಿ ಗೋವಾ ಮೂಲದ ಜನ ಇದ್ದರು ಮತ್ತು ಅವರು ಗೋವಾ ವಿಮೋಚನೆಗೆ ಆಗ್ರಹಿಸುತ್ತಿದ್ದರು. ಸೇನಾ ಕಾರ್ಯಾಚರಣೆಗೆ ಸಮ್ಮತಿಸುವಂತೆ ನೆಹರೂ ಅವರ ಮೇಲೆ ಮೆನನ್ ಒತ್ತಡ ಹೇರಲಾರಂಭಿಸಿದರು. ಈ ಕುರಿತು ಸ್ವತಃ ನೆಹರೂ ಅವರ ತಂಗಿ ವಿಜಯಲಕ್ಷ್ಮಿ ಪಂಡಿತ್ ಅವರು ಬ್ರಿಟಿಷ್ ಅಧಿಕಾರಿ ಗೋರ್-ಬೂತ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸೇನಾ ಕಾರ್ಯಾಚರಣೆಯ ಕುರಿತು ಭಾರತ ಯೋಚಿಸತೊಡಗಿದಾಗ ಅಮೆರಿಕದ ಭಾರತ ರಾಯಭಾರಿಯು ವಿಶ್ವಸಂಸ್ಥೆಗೆ ಹೋಗುವಂತೆ ನೆಹರೂ ಅವರಿಗೆ ಸಲಹೆ ನೀಡಿದ್ದರು. ಕಾಶ್ಮೀರದ ವಿಷಯದಲ್ಲಿ ವಿಶ್ವಸಂಸ್ಥೆಗೆ ಹೋದದ್ದೇ ತಪ್ಪಾಯಿತು ಎಂದು ಅರಿತಿದ್ದ ನೆಹರೂ, ವಿಶ್ವಸಂಸ್ಥೆಗೆ ಗೋವಾದ ವಿಷಯವನ್ನು ಕೊಂಡೊಯ್ಯುವ ತಪ್ಪು ಮಾಡಲಿಲ್ಲ. ಈ ಹೊತ್ತಿಗೆ ಅಮೆರಿಕದ ಅಧ್ಯಕ್ಷರು ಬದಲಾದರು. ನೂತನ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಬಂದಿದ್ದ ಜಾನ್ ಎಫ್. ಕೆನಡಿ, ಪೋರ್ಚುಗಲ್ ವಸಾಹತುಶಾಹಿ ಮನಃಸ್ಥಿತಿ ಬಿಡಬೇಕು ಎಂಬ ನಿಲುವು ಹೊಂದಿದ್ದರು. ಜಾಗತಿಕ ಬೆಳವಣಿಗೆಗಳಿಂದಾಗಿ ರಾಜತಾಂತ್ರಿಕವಾಗಿ ಕಾಲ ಪಕ್ವಗೊಂಡಿತ್ತು ಮತ್ತು 62ರ ಚುನಾವಣೆ ಗೆಲ್ಲಲೇಬೇಕೆಂಬ ರಾಜಕೀಯ ಸ್ವಾರ್ಥವೂ ಸೇರಿದಾಗ, ಗೋವಾ ವಿಮೋಚನೆಗೆ ಕಾಲ ಕೂಡಿಬಂತು.
1961ರ ಡಿಸೆಂಬರ್ 17ರಂದು ಭಾರತದ ಸೇನೆ ಗೋವಾ ವಶಕ್ಕೆ ಮುಂದಡಿಯಿಟ್ಟಿತು. ಸಾವಂತವಾಡಿ, ಕಾರವಾರ ಮತ್ತು ಬೆಳಗಾವಿಯ ಭಾಗದಿಂದ ಭಾರತದ ಸೇನೆ ಗೋವಾ ಪ್ರವೇಶಿಸಿತು. ಯುದ್ಧಸಾಮಗ್ರಿಗಳನ್ನು ಹೊತ್ತು ತರುತ್ತಿದ್ದ ಪೋರ್ಚುಗಲ್ ಯುದ್ಧನೌಕೆಗೆ ಗಿಬ್ರಾಲ್ಟರ್ ಮೂಲಕ ಹಾದುಹೋಗಲು ಇಂಗ್ಲೆಂಡ್ ಅನುಮತಿಸಿತ್ತು. ಆದರೆ ಸುಯೇಜ್ ಕಾಲುವೆ ಮೂಲಕ ಹಾದುಬರುವಾಗ ಅದನ್ನು ಈಜಿಪ್ಟ್ ಅಧ್ಯಕ್ಷ ನಾಸರ್ ತಡೆದರು. ನಾಸರ್ ಜೊತೆಗಿನ ನೆಹರೂ ಗೆಳೆತನ ಕೆಲಸ ಮಾಡಿತ್ತು. 14 ವರ್ಷಗಳ ಕ್ಲಿಷ್ಟ ಸಮಸ್ಯೆಯನ್ನು ನಮ್ಮ ಸೇನೆ ಕೇವಲ 26 ಗಂಟೆಗಳ ಅವಧಿಯಲ್ಲಿ ಪರಿಹರಿಸಿತ್ತು. ‘ಆಪರೇಷನ್ ವಿಜಯ್’ ಕಾರ್ಯಾಚರಣೆಯು 450 ವರ್ಷಗಳ ಪೋರ್ಚುಗಲ್ ಆಡಳಿತದಿಂದ ಗೋವಾ, ದಮನ್-ದಿಯುಗಳನ್ನು ಮುಕ್ತಗೊಳಿಸಿತ್ತು. ಸೇನೆಯ ಯಶಸ್ಸು 1962ರ ಚುನಾವಣೆಯಲ್ಲಿ ಮೆನನ್ ಅವರ ಗೆಲುವಿಗೆ ಸಹಕಾರಿಯಾಯಿತು.